Thursday, October 22, 2009

ನಮ್ಮ ಸಾಹಸ ಯಾತ್ರೆ - ಮುದುಕನ ಕತೆ - ಭಾಗ - ೨

ನಮ್ಮ ಮನೆಗೆ ಆಗ ಒಬ್ಬ ಮುದುಕ ಕೆಲಸಕ್ಕೆ ಬರುತ್ತಿದ್ದ. ಆತನ ಹೆಸರು ಕೆಪ್ಪ ಎಂದು. ಆತ ಕಿವುದನೆನಲ್ಲ. ಆದರೂ ಆ ಹೆಸರೇಕೆ ಬಂತೋ ಗೊತ್ತಿಲ್ಲ. ಆತ ಯುವಕನಾಗಿದ್ದಾಗ ಈಗಿನ ನಾಲ್ಕು ಆಳುಗಳು ಮಾಡುವಷ್ಟು ಕೆಲಸವನ್ನು ಒಬ್ಬನೇ ಮಾಡುತ್ತಿದ್ದನಂತೆ. ಈಗ ವಯಸ್ಸಾಗಿದ್ದರಿಂದ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಇದ್ದ. ಆತನ ಬಾಯಲ್ಲಿ ರೋಚಕ ಕತೆಗಳನ್ನು ಕೇಳುವುದೆಂದರೆ ಮರೆಯಲಾಗದ ಅನುಭವ. ಮಲೆನಾಡಿನಲ್ಲಂತೂ ಮೂರು ಹೊತ್ತೂ ಬಚ್ಚಲ ಬೆಂಕಿ ಉರಿಯುತ್ತಿರುತ್ತದೆ. ಆ ಬೆಂಕಿಯ ಎದುರು ಕೂತು ಗೇರು ಬೀಜವನ್ನೋ, ಹಲಸಿನ ಬೀಜವನ್ನೋ ಸುತ್ತು ತಿನ್ನುತ್ತಾ ಕೆಪ್ಪನ ಕತೆ ಕೆಳುತ್ತಿದೆವು. ಆತ ಮುಖ್ಯವಾಗಿ ನಮ್ಮನ್ನು ರಂಜಿಸಲು ಭೂತ, ದೆವ್ವದ, ಕಾಡು ಪ್ರಾಣಿಗಳ ಕತೆ ಹೇಳುತ್ತಿದ್ದ. ನಮ್ಮ ಅಜ್ಜನ ತೋಟಕ್ಕೆ ತಾಗಿಕೊಂಡೇ ನಮ್ಮ ಚಿಕ್ಕ ಅಜ್ಜನ ತೋಟ ಇದೆ. ಅದರ ಹಿಂದೆ ಭೂತನ ಕಲ್ಲು ಇದೆ. ಅದಕ್ಕೆ ಕೋಣನ ತಲೆಯ ಭೂತ ಎಂದು ಹೆಸರು. ಕೆಪ್ಪ ಒಮ್ಮೆ ಅದೇ ದಾರಿಯಲ್ಲಿ ರಾತ್ರಿ ಬರುವ ಪ್ರಸಂಗ ಬಂದಿತ್ತಂತೆ. ಆಗ ಅಜ್ಜನ ತೋಟದಲ್ಲಿ ಕೋಣವೊಂದು ತಿರುಗಾಡುತ್ತಿದ್ದಂತೆ ಕಂಡು ಬಂತಂತೆ. ಅದನ್ನು ನೋಡಿ ಕೆಪ್ಪ ಯಾರದ್ದೋ ಕೋಣ ತಪ್ಪಿಸಿಕೊಂಡು ಬಂದಿದೆ ಎಂದುಕೊಂಡು ಹೂಶ್, ಹೂಶ್ ಎಂದನಂತೆ. ಅದು ಒಮ್ಮೆ ಹುಲಿಯಂತೆ ಘರ್ಜಿಸಿದಾಗ ಕೆಪ್ಪನ ಮೈ ಕೈ ಅದುರಲು ಶುರುವಾಯಿತಂತೆ. ಆಗ ಆಟ ಅಲ್ಲಿಂದ ಓಡಲು ಶುರು ಮಾಡಿದವನು ಮನೆಯ ತನಕ ನಿಲ್ಲಲ್ಲಿಲ್ಲವಂತೆ. ಹೀಗೆ ಅನೇಕ ಕತೆಗಳನ್ನು ಹೇಳುತ್ತಿದ್ದ. ಇನ್ನೊಂದು ಕತೆ ಹೀಗಿದೆ. ಒಮ್ಮೆ ಭಯಂಕರ ಮಳೆ ಬಂತಂತೆ. ಮಳೆ ನಿಂತ ನಂತರ ಕೆಪ್ಪ ತೋಟಕ್ಕೆ ಹೋಗಿದ್ದನಂತೆ. ಅಲ್ಲಿ ಹಲಸಿನ ಮರದ ಒಂದು ಕೊಂಬೆ ಮುರಿದು ಬಿದ್ದಿತ್ತಂತೆ. ಆ ಕೊಂಬೆಯಲ್ಲಿ ಮೂರು ಹಕ್ಕಿ ಮರಿಗಳು ಗೂಡಿನಲ್ಲಿ ಇದ್ದವಂತೆ. ಅದು ಯಾವ ಹಕ್ಕಿ ಮಾರಿಯೋ ಕೆಪ್ಪನಿಗೆ ತಿಳಿಯಲ್ಲಿಲ್ಲ. ಆಟ ಅವುಗಳನ್ನು ಮನೆಗೆ ತಂದು ಉಪಚರಿಸಿದನಂತೆ. ಮೂರು ಹಕ್ಕಿಗಳಲ್ಲಿ ಒಂದು ಮಾತ್ರ ಬದುಕಿತಂತೆ. ಅದು ಹೇಗೋ ಹಾರಲು ಕಲಿತು ಕಾಡಿಗೆ ಹಾರಿ ಹೋಯಿತಂತೆ. ಈಗ ಆ ಜಾತಿಯ ಯಾವುದೇ ಹಕ್ಕಿ ಕಂಡರೂ ಕೆಪ್ಪ ತಾನು ಸಾಕಿದ್ದು ಎಂದು ಹೇಳುತ್ತಾನೆ.



ಇನ್ನೊಂದು ಭಾರಿ ಹಳೆ ಕತೆ. ಆಗ ಹುಲಿ, ಚಿರತೆ ಕಾಡುಗಳಲ್ಲಿ ಧಾರಾಳವಾಗಿ ಇದ್ದುವಂತೆ. ಒಮ್ಮೆ ಚಿರತೆಯೊಂದು ಇವನ ನಾಯಿ ಕದಿಯಲು ಬಂದಿತ್ತಂತೆ. ನಾಯಿ ಹೆದರಿ ಬೊಗಳಲು ಶುರು ಮಾದಿತ್ತಂತೆ . ಕೆಪ್ಪ ಹೊರಗೆ ಬಂದು ನೋಡಿದರೆ ಚಿರತೆ ! ಈತ ಸೊಂಟಕ್ಕೆ ಸಿಕ್ಕಿಸಿಕೊಂಡಿದ್ದ ಕತ್ತಿಯನ್ನು ಹಿರಿದು ಚಿರತೆಯೋದನೆ ಹೋರಾಡಲು ಅನಿಯಾದನಂತೆ. ಕೊನೆಗೆ ಚಿರತೆಯೇ ಓಡಿ ಹೋಯಿತಂತೆ. ಇದಾದ ಎರಡು ದಿನದ ನಂತರ ಒಮ್ಮೆ ಇವನ ನಾಯಿ ಮಂಗಗಳನ್ನು ಅಟ್ಟಿಸಿಕೊಂಡು ಕಾಡಿಗೆ taಹೋಗಿತ್ತಂತೆ. ಆಗ ಅದನ್ನು ಹಿಡಿದು ತಿಂದು ಮುಗಿಸಿತ್ತಂತೆ.



ಆತ ಹೇಳುವ ಕತೆ ಎಷ್ಟು ನಿಜವೋ, ಸುಳ್ಳೂ ತಿಳಿಯುತ್ತಿರಲ್ಲಿಲ್ಲ . ಆದರೂ ಆತ ಕತೆ ಹೇಳುವ ಶೈಲಿ ನಮ್ಮನ್ನು ರಂಜಿಸುತ್ತಿತ್ತು. ಒಂದು ಬಾರಿ ರಜಕ್ಕೆ ಹೋದಾಗ ನಾವು ಹಕ್ಕಿ ಮರಿಯ ಕತೆ ಕೇಳಿ ನಮಗೊಂದು ಹಕ್ಕಿ ತಂದುಕೊಡು ಸಾಕುತ್ತೇವೆ ಎಂದು ಹೇಳಿದೆವು. ಆತ ಕೊನೆಗೂ ತಂದು ಕೊಡಲ್ಲಿಲ್ಲ . ಆದರೆ ಹಕ್ಕಿ ಸಾಕುವುದು ಎಷ್ಟು ಕಷ್ಟ ಎಂದು ಒಂದು ಘಟನೆಯಿಂದ ತಿಳಿಯಿತು.



ಮುಂದಿನ ಭಾಗದಲ್ಲಿ : ಹಕ್ಕಿ ಮರಿಯೊಡನೆ ಒಂದು ದಿನ.

2 comments:

  1. ಕೆಪ್ಪನಂತಹ ಕಷ್ಟಜೀವಿಗಳು ಪ್ರಕೃತಿಯೊಂದಿಗೆ ನಿಕಟ ಸಂಪರ್ಕ ಹೊಂದಿರುತ್ತಾರೆ. ಕೆಲವೊಮ್ಮೆ ಉತ್ಪ್ರೇಕ್ಷೆಯೆನಿಸಿದರು ಅಂತವರು ಹೇಳುವ ಕಥೆಗಳು ಸ್ವಾರಸ್ಯಕರವಾಗಿರುತ್ತವೆ.

    ReplyDelete
  2. ಹೌದು ಕೆಪ್ಪನ ಕತೆಗಳು ನೂರೆಂಟಿವೆ. ಈಗಲೂ ಅವುಗಳನ್ನು ನೆನಪಿಸಿಕೊಂಡು ಸಂತೋಷ ಪಡುತ್ತೇವೆ.

    ReplyDelete